


ತಿರುವನಂತಪುರ: ಕೇರಳ ವಿಧಾನಸಭೆಯ ಅಧಿವೇಶನವು (Kerala Assembly Session) ಗುರುವಾರ(ಮೇ 21) ಆರಂಭಗೊಂಡಿದ್ದು, ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು. ಈ ವೇಳೆ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಶಾಸಕ (Manjeshwar MLA) ಎ.ಕೆ.ಎಂ. ಅಶ್ರಫ್ (A.K.M. Ashraf) ಅವರು ಕನ್ನಡ(Kannada) ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ಸಭೆಯ ಗಮನ ಸೆಳೆದಿದ್ದಾರೆ ಮತ್ತು ಕನ್ನಡಿಗರ ಮನ ಗೆದ್ದಿದ್ದಾರೆ.
ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯರಾಗಿ ಅಧಿಕಾರ ವಹಿಸಿಕೊಂಡ ಯುಡಿಎಫ್ (UDF) ಮೈತ್ರಿಕೂಟದ ಶಾಸಕ ಅಶ್ರಫ್ ತಮ್ಮ ಪ್ರಮಾಣ ವಚನದ ವೀಡಿಯೊವನ್ನು ಅಧಿಕೃತ ಫೇಸ್ಬುಕ್ ಪುಟದಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.


ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಬರೆದಿರುವ ಎ.ಕೆ.ಎಂ. ಅಶ್ರಫ್, “ಜನಪರ ಕಾಳಜಿ ಮತ್ತು ಜನರ ನಿರೀಕ್ಷೆಗಳ ಸಾಕ್ಷಾತ್ಕಾರದ ಸಂಕಲ್ಪದೊಂದಿಗೆ, ಭಾರತ ಸಂವಿಧಾನದ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿದು, ಇಂದು ಹದಿನಾರನೇ ಕೇರಳ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
