


ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ ಮುಂದುವರಿದಿದೆ. ಟಿವಿಕೆ ಅಧ್ಯಕ್ಷ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಜೊತೆಗೆ ಸಿಪಿಐ ಪಕ್ಷದ ಬೆಂಬಲವೂ ದೊರೆತಿದೆ. ಬಹುಮತಕ್ಕೆ ಕೊಂಚ ಕಡಿಮೆ ಸಂಖ್ಯೆಗಳಿದ್ದರೂ, ವಿಜಯ್ ಆಶಾವಾದಿಯಾಗಿದ್ದಾರೆ. ಆದರೆ ರಾಜ್ಯಪಾಲರು ಬಹುಮತದ ಸ್ಪಷ್ಟತೆ ಕೋರಿದ್ದು, ಪ್ರಮಾಣ ವಚನ ವಿಳಂಬವಾಗುತ್ತಿದೆ. ರಾಜಭವನದ ನಿರ್ಧಾರ ತಮಿಳುನಾಡಿನ ಭವಿಷ್ಯ ನಿರ್ಧರಿಸಲಿದೆ.
ಚೆನ್ನೈ, ಮೇ 07: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ದಿನಗಳೇ ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಮಾತ್ರ ಇನ್ನೂ ಮುಂದುವರಿದಿದೆ. ಈ ನಡುವೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಗ್ಗೆ ರಾಜ್ಯಪಾಲ ಆರ್ವಿ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ.
ಸರ್ಕಾರ ರಚಿಸಲು 118 ಸದಸ್ಯರ ಬಲದ ಅಗತ್ಯವಿದ್ದು, ವಿಜಯ್ ಅವರ ಹಾದಿ ಸವಾಲಿನಿಂದ ಕೂಡಿದೆ.ವಿಜಯ್ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107 ಆಗಲಿದೆ. ಕಾಂಗ್ರೆಸ್ನ 5 ಶಾಸಕರು ಈಗಾಗಲೇ ಬೆಂಬಲ ಪತ್ರ ನೀಡಿದ್ದಾರೆ.


ಸಿಪಿಐ ಎಂಟ್ರಿ: ಈಗ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.
ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ ಅವರು ಪರಿಸ್ಥಿತಿ ಏನೇ ಇರಲಿ, ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೊಂದೆಡೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಈಗ ವಿಜಯ್ ಅವರ ಬೆನ್ನಿಗೆ ನಿಂತಿರುವುದು ತಮಿಳುನಾಡು ರಾಜಕೀಯದ ಬದಲಾದ ಗಾಳಿಗೆ ಸಾಕ್ಷಿಯಾಗಿದೆ.
ಚಲನಚಿತ್ರೋದ್ಯಮದ ಜನಪ್ರಿಯತೆಯ ಬೆನ್ನಲ್ಲೇ ರಾಜಕೀಯಕ್ಕೆ ಬಂದ ವಿಜಯ್, ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಈಗ ರಾಜಕೀಯದ ‘ಕ್ಲೈಮ್ಯಾಕ್ಸ್’ ಹಂತದಲ್ಲಿರುವ ಅವರು, ವಿರೋಧಿಗಳ ತಂತ್ರವನ್ನು ಮೆಟ್ಟಿ ನಿಂತು ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರಾ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ರಾಜಭವನದಿಂದ ಸಿಗುವ ಮುಂದಿನ ಸೂಚನೆಯೇ ತಮಿಳುನಾಡಿನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ
