



ಬೆಳ್ತಂಗಡಿ, ಜೂನ್ 4: ಪ್ರಸಿದ್ಧ ಪ್ರವಾಸಿ ತಾಣ ಗಡಾಯಿಕಲ್ಲಿನಲ್ಲಿ ಕಾಲು ಉಳುಕಿ ಬಂಡೆಯ ಮೆಟ್ಟಿಲಿನ ಮಧ್ಯೆ ಸಿಲುಕಿದ್ದ ಯುವಕನನ್ನು ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ತಂಡ ಸುಮಾರು ಮೂರು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿದೆ.

ಕರಾಯ ನಿವಾಸಿ ಯುವಕ ಸೇರಿದಂತೆ ಇಬ್ಬರು ಯುವಕರು ಹಾಗೂ ಇಬ್ಬರು ಮಹಿಳೆಯರು ಗುರುವಾರ ಬೆಳಗ್ಗೆ ಗಡಾಯಿಕಲ್ಲು ವೀಕ್ಷಣೆಗೆ ತೆರಳಿದ್ದರು. ಕಡಿದಾದ ಬಂಡೆಯ ಮೆಟ್ಟಿಲುಗಳನ್ನು ಹತ್ತಿ ಮೇಲೇರಿದ ವೇಳೆ ಯುವಕರಲ್ಲಿ ಒಬ್ಬರ ಕಾಲು ಟ್ವಿಸ್ಟ್ ಆಗಿ ಉಳುಕಿದ್ದು, ತೀವ್ರ ನೋವಿನಿಂದ ಕೆಳಗಿಳಿಯಲು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಕೊಂಡರು.

ತಕ್ಷಣ ಜೊತೆಗಿದ್ದವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಳ್ತಂಗಡಿ ಪೊಲೀಸರು, ತುರ್ತು ಸ್ಪಂದನಾ ಘಟಕದ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮಳೆಯಿಂದ ಬಂಡೆಗಳು ಜಾರುವಂತಾಗಿದ್ದರೆ, ಕಲ್ಲಿನ ಮೆಟ್ಟಿಲುಗಳು ಕಡಿದಾಗಿದ್ದ ಕಾರಣ ಗಾಯಾಳುವನ್ನು ಸೈಚರ್ ಮೂಲಕ ಕೆಳಕ್ಕೆ ತರುವುದು ಸವಾಲಿನ ಕೆಲಸವಾಗಿತ್ತು. ಆದರೂ ಎಲ್ಲ ಅಡೆತಡೆಗಳನ್ನು ಮೀರಿ ಸುಮಾರು ಮೂರು ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆಳಕ್ಕೆ ತರಲಾಯಿತು.
ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕಾಲಿಗೆ ಗಂಭೀರ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
