ಬೆಳ್ಳಾರೆ ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದ ಸೂರಜ್ ರೈಯವರು (27 ವ.) ವಾಹನ ಅಪಘಾತದಲ್ಲಿ ಗಾಯಗೊಂಡು ಇಂದು ಮುಂಜಾನೆ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಮೇ. 15ರಂದು ರಾತ್ರಿ ಬೆಂಗಳೂರಿಗೆ ತನ್ನ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕುಣಿಗಲ್ ಬಳಿ ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡು ಕುಣಿಗಲ್ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕಳೆದ ರಾತ್ರಿ ವಿಧಿವಶರಾಗಿರುವುದಾಗಿ ತಿಳಿದುಬಂದಿದೆ. ಪಾರ್ಥಿವ ಶರೀರ ಮದ್ಯಾಹ್ನ 2 ಗಂಟೆ ಹೊತ್ತಿಗೆ ಬೆಳ್ಳಾರೆ ತಲುಪಲಿದೆ. ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಮೃತರು ಪತ್ನಿ ಶ್ರೀಮತಿ ಸ್ನೇಹ, ತಂದೆ ಯಕ್ಷಗುರು ವಾಸುದೇವ ರೈ ವಿ, ತಾಯಿ ಶ್ರೀಮತಿ ಶರ್ಮಿಳಾ ರೈ, ಓರ್ವ ಸಹೋದರ ಸುದೀಪ್‌ ರೈ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.