

ನವದೆಹಲಿ/ಬೆಂಗಳೂರು: ಶ್ರೀಲಂಕಾದಿಂದ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿ ಬೆಂಗಳೂರಿನ ಟೆಕ್ಕಿ ದಂಪತಿ ಇತಿಹಾಸ ಸೃಷ್ಟಿಸಿದ್ದಾರೆ.

ಬೆಂಗಳೂರು ಮೂಲದ ಐಟಿ ಉದ್ಯಮಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ದಾಖಲೆ ಸೃಷ್ಟಿಸಿದ್ದಾರೆ.ಶ್ರೀಲಂಕಾದಿಂದ ರಾಮ ಸೇತು ಮಾರ್ಗದ ಮೂಲಕ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿದ್ದಾರೆ. ಈಜಿಕೊಂಡು ಬರುವ ಕೆಲ ಕ್ಲಿಪ್ಗಳನ್ನು ದಂಪತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೋರಾದ ಅಲೆಗಳು, ಗಾಳಿ ಹಾಗೂ ಅಲೆಗಳ ಏರಿಳಿತದ ವಿರುದ್ಧ ಸೆಣಸಾಡಿ ಭಾರತದ ದಡ ಸೇರಿರುವುದಾಗಿ ತಿಳಿಸಿದ್ದಾರೆ.


ಮೇ 7ರಂದು ಬೆಳಿಗ್ಗೆ 4:30ರ ಸುಮಾರಿಗೆ ಶ್ರೀಲಂಕಾದ ತಲೈಮನ್ನಾರ್ನಿಂದ ಹೊರಟ ದಂಪತಿ ರಾಮ ಸೇತು ಮಾರ್ಗವಾಗಿ 32 ಕಿ.ಮೀ ಈಜಿಕೊಂಡು ಮಧ್ಯಾಹ್ನ ಸುಮಾರು 3:15ಕ್ಕೆ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪಿದ್ದಾರೆ. ಒಟ್ಟು 10 ಗಂಟೆ 45 ನಿಮಿಷ ಕಾಲ ಪ್ರಯಾಣಿಸಿ ರಾಮ ಸೇತು ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿಕೊಂಡು ಬಂದ ಮೊದಲ ದಂಪತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.
