ಕಾಸರಗೋಡು: ಮದುವೆ ನಿಶ್ಚಿತಾರ್ಥವಾಗಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಆತನ ವಿಯೋಗವನ್ನು ತಾಳಲಾರದೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಾಸರಗೋಡಿನ ಕಿದೂರಿನಲ್ಲಿ ನಡೆದಿದೆ.

ಕಿದೂರು ಕುಂಟಂಗೇರಡ್ಕ ನಿವಾಸಿ ಬಿ. ಜಯಾನಂದ ಅವರ ಪುತ್ರಿ ಪ್ರಫುಲ್ಲ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮನೆಯವರೆಲ್ಲರೂ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರಫುಲ್ಲ ಮನೆಯೊಳಗೆ ನೇಣಿಗೆ ಶರಣಾಗಿದ್ದಾರೆ. ಕಾರ್ಯಕ್ರಮ ಮುಗಿಸಿ ಕುಟುಂಬಸ್ಥರು ವಾಪಸಾದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರಫುಲ್ಲ ಅವರಿಗೂ ಮತ್ತು ತಮಿಳುನಾಡು ಮೂಲದ ಬ್ಯಾಂಕ್‌ ಉದ್ಯೋಗಿ ಮಣಿ ಎಂಬುವವರಿಗೂ ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿತ್ತು. ಮಳೆಗಾಲ ಮುಗಿದ ನಂತರ ಮದುವೆ ಮಾಡಲು ಎರಡೂ ಕುಟುಂಬಗಳು ನಿರ್ಧರಿಸಿದ್ದವು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಒಂದು ತಿಂಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಭಾವಿ ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಬಂದಿದ್ದ ಪ್ರಫುಲ್ಲ, ಅಂದಿನಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಣಿಯ ಅಗಲಿಕೆಯ ನೋವು ಅವರನ್ನು ಸತತವಾಗಿ ಕಾಡುತ್ತಿತ್ತು ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಪ್ರಫುಲ್ಲ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾರೆ. “ನನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ಮಣಿಯ ಸಾವಿನ ದುಃಖವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನನ್ನ ಅಂತ್ಯಕ್ರಿಯೆಯನ್ನು ಮಣಿಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲೇ ಮಾಡಬೇಕು” ಎಂದು ಅವರು ವಿನಂತಿಸಿದ್ದಾರೆ.

ಯುವತಿಯ ಕಡೇ ಆಸೆಯಂತೆ, ಎರಡೂ ಕುಟುಂಬದವರು ಒಮ್ಮತದ ನಿರ್ಧಾರಕ್ಕೆ ಬಂದಿದ್ದು. ಪ್ರಫುಲ್ಲ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ತಮಿಳುನಾಡಿಗೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಕುಂಬಳೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ