ಚಿತ್ರದುರ್ಗ: ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಆಗಲಿದೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಡುವ ಸಮಯ ಹತ್ತಿರದಲ್ಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಹಿನ್ನೆಲೆ ವಾಲ್ಮಿಕಿ ಭವನದಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಒಂದು ಗೆರೆ ದಾಟಿದರೆ ಸಿಎಂ ಆಗುತ್ತಾರೆ. ಆದರೆ ನಾನು ಯಾವ ಗೆರೆ ಎಂದು ಹೇಳಲು ಹೋಗೋದಿಲ್ಲ. ಅದು ಯಾವ ಗೆರೆ ಎಂದು ಡಿಕೆಶಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು. ಡಿಕೆ ಶಿವಕುಮಾರ್ ತಾತನಾಗಿದ್ದು ಒಂದು ಸಂತೋಷವಾದರೆ ಸಿಎಂ ಆಗುತ್ತಿದ್ದಾರೆಂಬ ನಿರೀಕ್ಷೆ ಮತ್ತೊಂದು ಸಂತೋಷ ಎನಿಸಿದೆ ಎಂದರು. 

ಡಿಕೆಶಿ ಸಿಎಂ ಆದರೆ ಸಿದ್ದರಾಮಯ್ಯ ಜೊತೆ ಅವರ ಪುತ್ರ ಯತೀಂದ್ರ ಮಾತ್ರ ಉಳಿಯುತ್ತಾರೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಏಕಾಂಗಿ ಆಗಲಿದ್ದಾರೆ. ಹಾಗೆಯೇ ಶೃಂಗೇರಿ ರೀತಿಯಲ್ಲೇ 2018ರಲ್ಲಿ ನನಗೆ ಬಾದಾಮಿ ಕ್ಷೇತ್ರದಲ್ಲಿ ಮೋಸ ಮಾಡಿದ್ದು, ನಾನು ಕ್ಷೇತ್ರಕ್ಕೆ ತಡವಾಗಿ ಹೋದೆ, ಅಷ್ಟರಲ್ಲಿ ಫಲಿತಾಂಶ ಘೋಷಿಸಿದ್ದರು. ನಾನು ಅಂದು ಕೋರ್ಟ್ಗೆ ಹೋಗಲು ಆಗಲಿಲ್ಲ. ಆದರೆ ಶೃಂಗೇರಿಯಲ್ಲಿ ಜೀವರಾಜ್ ಕೋರ್ಟ್ಗೆ ಹೋಗಿದ್ದರು. ಹೀಗಾಗಿ ಮರು ಮತದ ಎಣಿಕೆ ವೇಳೆ ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.