ಭುವನೇಶ್ವರ: ಲೈಂಗಿಕತೆಗೆ ಸಹಕರಿವಂತೆ ನಿರಂತರವಾಗಿ ತನ್ನ ವಿಭಾಗದ ಮುಖ್ಯಸ್ಥ (HOD) ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಒಡಿಶಾದ ಬಾಲಸೋರ್‌ನ ಕಾಲೇಜುವೊಂದರಲ್ಲಿ ನಡೆದಿದೆ.

ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಭಾಗದ ಮುಖ್ಯಸ್ಥ ಲೈಂಗಿಕತೆಗೆ ಸಹಕರಿಸುವಂತೆ ಕೇಳುತ್ತಿದ್ದ. ಇದಕ್ಕೆ ಒಪ್ಪದಿದ್ದರೆ ತನ್ನ ಭವಿಷ್ಯವನ್ನೇ ಹಾಳುಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರ ಕೊಠಡಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬೆಂಕಿ ಹಚ್ಚಿಕೊಂಡಾಕೆ ಶೇ.95 ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನೂ ಆಕೆಯನ್ನು ಉಳಿಸಲು ಹೋದ ವಿದ್ಯಾರ್ಥಿನಿಗೂ ಬೆಂಕಿ ತಗಲಿದ್ದು ದೇಹದ ಶೇ.70 ರಷ್ಟು ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಭುವನೇಶ್ವರದ ಏಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಒಡಿಶಾ ಪೊಲೀಸರು ಆರೋಪಿ ಸಮೀರ್ ಕುಮಾರ್ ಸಾಹೋ ಹಾಗೂ ಕ್ರಮ ಕೈಗೊಳ್ಳದ ಪ್ರಾಂಶುಪಾಲ ದೀಲಿಪ್ ಕುಮಾರ್ ಘೋಷ್ ಇಬ್ಬರನ್ನೂ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಪ್ರಾಂಶುಪಾಲನನ್ನ ಉನ್ನತ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಜೊತೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಹೇಳಿದ್ದಾರೆ.