


ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದಲ್ಲಿ ಮನೆಯೊಂದಕ್ಕೆ ಮಾರ್ಚ್ 7ರಂದು ಮದ್ಯಾಹ್ನ 12-00 ಗಂಟೆ ಅವಧಿಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಸರಿ ಸುಮಾರು ರೂ 4,80,000 ಸಾವಿರ ಮೌಲ್ಯದ 39 ಗ್ರಾಂ ಚಿನ್ನಾಭರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.


ಮನೆ ಕಳ್ಳತನ ಪ್ರಕರಣದ ಪತ್ತೆಯ ಕುರಿತು ಕಾವೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ಪತ್ತೆ ತಂಡವನ್ನು ರಚಿಸಿ, ಆರೋಪಿಯ ಬೆನ್ನು ಬಿದ್ದು, ಆತನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸಜೀಪನಡು, ದೇರಾಜೆ ಮನೆ ನಿವಾಸಿ ದೊಂಬಯ್ಯ ಪೂಜಾರಿಯ ಮಗ ಅಶೋಕ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಕಳ್ಳತನ ನಡೆದ 24 ಗಂಟೆಯೊಳಗೆ ದಸ್ತಗಿರಿ ಮಾಡಿ ಆಪಾದಿತನಿಂದ ಕಳವು ಮಾಡಿರುವ ಎಲ್ಲಾ ಸೊತ್ತುಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಮನೆ ಕಳ್ಳತನ ಪ್ರಕರಣದ ಪತ್ತೆ ಕಾರ್ಯಚರಣೆಯಲ್ಲಿ ಕಾವೂರು ಪೊಲೀಸ್ ಠಾಣಾ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪ-ನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರಾ, ಸಿಬ್ಬಂದಿಗಳಾದ ದಿನೇಶ್, ಮಾಲತೇಶ್, ನಾಗರಾಜ್ ಹಾಗೂ ರಿಯಾಜ್ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ.
