



ಕಾರ್ಕಳ : ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿರುವುದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ತಲ್ವಾರ್ ಝಳಪಿಸಿ ಜೀವ ಬೆದರಿಕೆಯೊಡ್ಡಿರುವ ಕುರಿತು ಮಾ. 6ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀರೆ ಗ್ರಾಮದ ಪುಷ್ಪಲತಾ ಅವರು ಬೈಲೂರು ಪಂಚಾಯತ್ ಕಟ್ಟಡದ ಮುಂಭಾಗ ಇರುವ ಮಹಾಮ್ಮಾಯಿ ಫಾಸ್ಟ್ಪುಡ್ ಅಂಗಡಿ ಎದುರುಗಡೆ ಇರುವಾಗ ಆರೋಪಿ ಗಣೇಶ ಪೂಜಾರಿ ಕಾರಿನಲ್ಲಿ ಬಂದು ಪುಷ್ಪಲತಾ ಅವರನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ತಲ್ವಾರನ್ನು ಬೀಸಿರುತ್ತಾನೆ. ಈ ವೇಳೆ ಪುಷ್ಪಲತಾ ಅವರು ತಪ್ಪಿಸಿಕೊಂಡಿರುತ್ತಾರೆ. ಅಲ್ಲದೆ ಪುಷ್ಪಲತಾ ಅವರ ಗಂಡನನ್ನು ಉದ್ದೇಶಿಸಿ ನನ್ನ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ನಿಮ್ಮಿಬ್ಬರನ್ನು ಇದೇ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ಬೈದಿರುತ್ತಾನೆ.

ಪುಷ್ಪಲತಾ ಅವರ ಗಂಡ ಮಹಾಮ್ಮಾಯಿ ಫಾಸ್ಟ್ಪುಡ್ ಅಂಗಡಿಯ ರಾಜೇಂದ್ರ ಅವರು ಆರೋಪಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿರುವುದಕ್ಕೆ ಆರೋಪಿಯು ಈ ಕೃತ್ಯ ಎಸಗಿರುವುದಾಗಿದೆ ಎಂದು ಪುಷ್ಪಲತಾ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

