



ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆ ಬೇರಿಕೆ ಎಂಬಲ್ಲಿ ಕೃಷಿ ಭೂಮಿಯ ಪಕ್ಕದಲ್ಲಿ ಲೇಔಟ್ ಮಾಡುವ ಸಂದರ್ಭ ಅವೈಜ್ಞಾನಿಕ ತಡೆಗೋಡೆ ಮಾಡಿ ನೈಸರ್ಗಿಕ ಮಳೆ ನೀರು ಅಥವಾ ಒಳಚರಂಡಿ ಮಾರ್ಗಗಳಿಗೆ ತಡೆಯಾಗಿದೆ ಜೊತೆಗೆ ಇದರಿಂದ ಸಾಕಷ್ಟು ಕೃಷಿ ಹಾನಿಯಾಗಿದೆ ಎಂದು ಚಂದ್ರಾವತಿ ಮತ್ತು ಅವರ ಮಕ್ಕಳು ನೀಡಿದ ದೂರಿನ ವಿಚಾರಣೆ ನಡೆಸಿದ ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಹೌದು ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಬೇರಿಕೆಯಲ್ಲಿ ಲೇಔಟ್ ನಿರ್ಮಾಣ ಮಾಡುವ ಸಂದರ್ಭ ಪಕ್ಕದಲ್ಲಿರುವ ಚಂದ್ರಾವತಿ ಮತ್ತು ಅವರ ಮಕ್ಕಳ ಕೃಷಿ ತೋಟಗಳಿಗೆ ಹಾನಿಯಾಗಿದ್ದು, ಸುಮಾರು 300ಕ್ಕೂ ಅಧಿಕ ಅಡಿಕೆ ಮರಗಳು ಸತ್ತು ಹೋಗಿದೆ ಎಂದು ವಕೀಲ ನಾಗೇಶ್ ಶರ್ಮ ಅವರ ಮೂಲಕ ಖಾಸಗಿ ದೂರು ನೀಡಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯವು, ಕಾನೂನುಬದ್ಧ ಯೋಜನೆಯಿಲ್ಲದೆ, ಅವೈಜ್ಞಾನಿಕ ತಡೆಗೋಡೆಯಿಂದಾಗಿ ನೈಸರ್ಗಿಕ ಮಳೆ ನೀರು ಅಥವಾ ಒಳಚರಂಡಿ ಮಾರ್ಗಗಳಿಗೆ ಅಡ್ಡಿಯಾಗುತ್ತದೆ. ಇದರ ಜೊತೆಗೆ ಪಕ್ಕದ ಕೃಷಿ ಭೂಮಿಗೂ ತೊಂದರೆ ಆಗಿದೆ ಎಂದು ಅಭಿಪ್ರಾಯಪಟ್ಟು, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.

